Tuesday, May 20, 2014

ಹೆಣ್ಣು

ನೀನೆನಗೆ ನಾನಿನಗೆ ಒಲಿದಾಘಳಿಗೆ
ಕೆಳಬಾಗಿದ ನಿನ್ನ ಕಂಗಳಾಹ್ವಾನ
ನಡುಗುವಾ ಅಧರಗಳೇ ಆದವಾಧಾರ
ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ
ನಿನ್ನ ಒದ್ದೆ ತುಟಿಗಳ ನಾ ಕದ್ದೆ
ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ
‘ಇದು ಸ್ವರ್ಗ ನೀ ಸರಸಿ
ಅರಸಿ ಬಂದಿಹ ನಾ ರಸಿಕ’
ಮಾತು ನನ್ನದು -ಜಾಣೆ ನೀ ಮೌನಿ
ಧ್ಯಾನದ ಧನ್ಯತೆ ನಿನ್ನದು
ಅಬ್ಬರದ ಮಂತ್ರದಾರ್ಭಟ ನನ್ನದು.

 

ಹಚ್ಚ ಹಸಿರಿನ ಪಚ್ಚ ಪೈರಿನ ಬಳುಕು
ತುಳುಕಿಸಲು ನಾನೋಡಿದ ಪರಿಗೆ
ನಿನ್ನುತ್ತರವದೇ ಮಂದಹಾಸ
ಪಡೆಯುವದಕ್ಕಿಂತ ಕೊಡುವದರ ಮಹತ್ತು
ಹತ್ತತ್ತು ಸಾರಿ ನೀ ತೋರಿದೆ ಮತ್ತೆ ಮತ್ತೆ
ಕೊಳ್ಳುವದರಲ್ಲೇ ನಾ ಕಾಲ ಕಳೆದೆ
ಕೊಡುತ ಬಾಳುವದ ಕಲಿಬೇಕು ನೋಡಿನ್ನು
ಮನೆ,ಮಹಲು ಬೇಡೆಂದೆ ನೆಮ್ಮದಿ ಮನ ಬೇಕೆಂದೆ
ಮಗುವಾಗಿಸಿ ಮಡಿಲಲ್ಲಿ ತಟ್ಟಿ ಮಲಗಿಸಿದೆ
ಬಿದ್ದಾಗ ತಬ್ಬಿ ಎತ್ತಿ ಎಚ್ಚರಿಸಿದೆ
ಕವಿಯ ಕವಿತೆ ನೀನು ದೀಪದ ಹಣತೆ.

ಅರಿವಾಗದ್ದೆ ಹೆಣ್ಣೆನೋ, ಮಣ್ಣಿನ ಕಣ್ಣೆನೋ
ನೆಲ,ನದಿಯ ಸಂತಾನ ನೀನು
ನಿರಂತರ ನೀಡುವ ನಿಲುವಿನವಳು
ಛಲವ ಚೆಲುವಾಗಿಸಿ ಒರಟನಲ್ಲಿ ಒಲವಿಳಿಸಿ
ನನ್ನ ಬರಡು ಕೊರಳ ಕೊಳಲಾಗಿಸಿದವಳು
ನೋವನುಂಗಿ ಹೊತ್ತು ಹೆತ್ತು
ಭೂಮಿ ಬಗಿದು ಹೊಸತ ಚಿಗಿಸಿ
ಬಾಳನಿತ್ತು ಅನಿತು ಸುಖವ ಬಡಿಸಿದವಳು
ನಿನ್ನ ನೆನೆವವರ ಮನೆಯ ಬಿಟ್ಟು
ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು
ಬಿಟ್ಟ ಮನೆಗೆ ಅಟ್ಟ ಕಟ್ಟಿ ಬದುಕು ಉಟ್ಟವಳು.


ಬನ್ನಣೆಗೆ ಸಿಗದ ಹೊಗಳಿಕೆಗೆ ಹಿಗ್ಗದ
ಮಲ್ಲಿಗೆಯ ಮೊಗ್ಗಿನ ಸುಗಂಧ
ಮೊಗೆದಷ್ಟೂ ಸಿಗುವ ಅಗಿದಷ್ಟೂ ಅಳಿಯದ
ರಾತ್ರಿಯ ನೀರವತೆಯಲ್ಲಿ ಬೆಳಗಿನ ನಿರೀಕ್ಷೆ
ಕತ್ತಲೆಯ ಕದದೂಡಿ ಕಾಂತಿಯಂತೆ ನಿಂತಿ
ಜ್ಞಾನದ ಕೂರ್ಜಾಣ್ಮೆ ನಿರ್ಮಲಾಂತರಂಗ
ಶ್ರೇಷ್ಠತೆಯ ವ್ಯಸನವಿಲ್ಲದ ಒಳತಿನ ಮಿತಿ
ನಗುವರಳಿಸಿ ನಕ್ಕರೆ ನಭಕೆ ಚೆಲ್ಲಿದ ಸಕ್ಕರೆ
ಹೆಣ್ಣಿಲ್ಲದ ಜಗ ಭಣ ಭಣ ಮರವಿಲ್ಲದರಣ್ಯ
ಕಣ ಕಣದಲಿ ತುಂಬಿದ ಅಂತಃಕರಣ
ನೀ ಬಳಲಿದಂದೇ ಮನುಜರ ಮರಣ.

ಹೆಣ್ಣು 

ದೇವನೊಲಿದ

ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.

-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God'  ಪದ್ಯದ ಭಾವಾನುವಾದ)


ದೇವನೊಲಿದ 

Wednesday, April 16, 2014

ಕಬಳಿಸೋ ಮಗನ ಕಬಳಿಸು

                ಕಬಳಿಸೋ ಮಗನ ಕಬಳಿಸು

ಹೂ, ಗಿಡ, ಹಣ್ಣು, ಹಕ್ಕಿಯಿಂದ ಕಲಿಲಿಕ್ಕೆ ಸಾಧ್ಯ ಇಲ್ಲಾ
ಅದ ಅಂತ ಹೇಳಿದವರ ಬಾಯಿ ಮೊದಲ ಹೊಲಿ.
ಮುಗಿಲು,ಮೋಡ,ಚಂದ್ರ,ಸೂರ್ಯ ಇವೆಲ್ಲಾ
ನಾಲಾಯಕ್ಕ ಅವತರ ಗೂಡಾ ನಡಿಬ್ಯಾಡ-ಫಾಯ್ದಾ ಇಲ್ಲಾ.
ನದಿಯಂತ, ಮೇಘಚುಂಬಿ,ಗುಡಿ,ಗುಂಡಾರಂತ ಎಲ್ಲಾ ಸುಳ್ಳು
ಆತ್ಮ, ಮೋಕ್ಷ, ನರಕ, ಸ್ವರ್ಗ ಎಲ್ಲಾ ಪೂರಾಕೆಪೂರಾ ಮೇಡಪ್ಪು.
ಇರಬಿ ನೋಡಿ ಕೆಲಸ ಕಲಿಲಿಕ್ಕಾಂಗಗಿಲ್ಲಾ.
ಗಡಿಯಾರಾ ನೋಡಿ ಬದಕು ನಿಖರಾಗಂಗಿಲ್ಲಾ.
ಅದು ಇದು ಅವರಿವರು ಬರೆದಿದ್ದು ಓದಿ
ಸಾಧನಿ ಮಾಡುದು ಅಶಕ್ಯ ಐತಿ ತಿಳ್ಕೊ ಮಗನ.

ನಮ್ದು ಮಿಡ್ಲ ಕ್ಲಾಸು -ಯಾವಾಗ್ಲೂ ಖಾಲಿ ಅರ್ಧಾ ಗ್ಲಾಸು.
ಅವುಡಗಚ್ಚಿ ಓದು ಮಗನ – ಅದ ನಿನ್ನ ರಹದಾರಿ
ಇನ್ನೊಂದು ದಾರಿ ಯಾರು ತೋರಿಸಿಲ್ಲಾ ಇನ್ನೂನು.
ಹೊಡಿ,ಬಡಿ,ರಕ್ತಾ ಸುರಿಸ್ಲಾರ್ದ ಏನಾದರೂ ಮಾಡ್ಲಿಕ್ಕಾದ್ರ
ಮಾಡು-ಡೌಟೈತಿ ನನಗೇನೋ, ಆದ್ರೂ ಒಂದ್ಸಾರಿ ನೋಡು.
ಹೆಂಗರ ಮಾಡಿ ಮ್ಯಾಲೆ ಬರಬೇಕು ಮಗನ.
ಮರಿಬ್ಯಾಡ ನ್ಯೂಟನನ ಕಥಿ
ಎಷ್ಟು ತುಳಿತಿಯೋ ಅಷ್ಟು ಪುಟಿತಿ.
ಎಲ್ಲಾರ ಅಂಡಿಗೆ ಕಟ್ಟಿ ಐರನ್ ಉಂಡಿ
ನೀ ಮಡಿಕೋ ನಿನ್ನದೊಂದೆ ಧುಮಕು ಕೊಡಿ.

ಕಂಡದ್ದು ತಿನ್ನು, ಸಿಕ್ಕದ್ದು ಕುಡಿ-ಸಿಕ್ಕವರ ಜೋಡಿ
ಫಸ್ಟ ಮುವತ್ತರಾಗ ರಿಚ್ಚೆಸ್ಟ ಲಿಸ್ಟನ್ಯಾಗ ಹೆಸರ ಜಡಿ.
ನೆಕ್ಷ್ಟ ಮುವತ್ತರಾಗ ನೀ ಕುಂಡಿ ಊರಿದ್ದು, ನಿಂತದ್ದು
ಎದ್ದದ್ದು, ಮಲಗಿದ್ದು ಆಗಬೇಕು – ಸುದ್ದಿಯೋ ಸುದ್ದಿ.
ಹುಚ್ಚೆದ್ದು ಮುಗಿ ಮುಗಿದು ಬೀಳಬೇಕು ಪರಪಂಚದ
ಮೂಲೆ ಮೂಲೆ ಮಂದಿ, ನೀ ತಗದರ ಬಾಯಿ -
ಟಕ ಟಕಾ ತಗಿಬೇಕು ಬಿಲಿಯನ ಕಿವಿ.
ಎತ್ತಿದರ ನೀ ನಿಂದೊಂದು ಬಟ್ಟೂ
ಕೋಟಿ ಜನ ನಿಲ್ಲಬೇಕು ಬಿಟಗೊಂಡು ಬಟ್ಟು.
ಆಗ್ಬೇಕು ನಡದದ್ದ ಹಾದಿ – ಬಂಗಾರ ನಿನ್ನ ಲದ್ದಿ.

ಮುಂದಿನ ಮುವತ್ತು ಕುಂತಿ ಹಂಗ, ಖಬರಗೇಡಿ,
ಅಪ್ಪಾ, ಅವ್ವಾ, ಬಂಧು, ಹೇಣತಿ-ಮಕ್ಕಳ ಮರಿ.
ಜಗತ್ತಿನ್ಯಾಗ ಏನೆನೈತಿ ಅದರ್ಮ್ಯಾಗ ನಿನ್ನ ಹಕ್ಕೈತಿ
ಕಬಳಿಸು ಏನೂ ಉಳಿಸದಂಗ-ನಿರಂಕುಶಮತಿಯಾಗು.
ಸ್ವಂತೊದ್ಧಾರ ಆಗಿರಲಿ ನಿನ್ನ ಮಂತ್ರೊದ್ಧಾರ
ಢರಕಿ ಬರ್ಲಿ ಹಂ ಅಹಂ ಅಂತ ಢುಸಕಿ ಹೊಡ್ದೊಡದು.
ಹಾರ್ಟನ್ಯಾಗಿಲ್ಲ ಭಾವಾ, ಮೆದುಳಾಗಿಲ್ಲ ಮೋಹಾ -
ಇರ್ಬೇಕು ಜಿಟ್ಟೀಯ ಹುಳದಂಗ-ತಿನ್ಕೋತ ಸುತ್ತಲಿಂದು
ಏನಾರ ಉಳಿಸಿದ್ಯಾದ್ರ ನೋಡು ನನ್ಮ್ಯಾಲಾಣಿ
ನೀ ಹೋಗುಕ್ಮೊದ್ಲು ಹೋಗೀರ್ಬೇಕು ಹ್ಯೂಮ್ಯಾನಿಟಿ.

'ಅವಧಿ' ಯಲ್ಲಿ ಪ್ರಕಟಿತ --
http://avadhimag.com/2014/04/16/%E0%B2%A8%E0%B2%AE%E0%B3%8D%E0%B2%A6%E0%B3%81-%E0%B2%AE%E0%B2%BF%E0%B2%A1%E0%B3%8D%E0%B2%B2-%E0%B2%95%E0%B3%8D%E0%B2%B2%E0%B2%BE%E0%B2%B8%E0%B3%81-%E0%B2%AF%E0%B2%BE%E0%B2%B5%E0%B2%BE%E0%B2%97/


Monday, March 17, 2014

ಕಂಭಕ್ಕಾತು ನಿಲ್ಲುವದಿಲ್ಲ

ಕಂಭಕ್ಕಾತು ನಿಲ್ಲುವದಿಲ್ಲ

ಅನಿಲ ತಾಳಿಕೋಟಿ

ಮೊದಲಾದರೆ ನೀ ಬರುವ
ಪರಿಮಳವದೆಂತೋ ಪತ್ತೆ ಹಚ್ಚಿ
ಇದ್ದೊಂದ ಪೌಂಡ್ಸ ಪೌಡರನ
ಒಂದೆರಡು ಗ್ರಾಂಗಳ ಮೆತ್ತಿ
ನಗುವರಳಿಸಿ ನಾ ಕಾಯುತ್ತಿದ್ದೆ.

ಕಾಯದ ಪ್ರಭಾವವೋ ಗಾಯದ್ದೋ
ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ
ಕಮ್ಮಿಯಾಗಿರುವದು ಕಂಭಗಳೇನಲ್ಲ
ಎನ್ನುವದ ನೀ ಅರಿಯದವಳೇನಲ್ಲ
ಸಂಧಿಗೊಂದಿಗಳಲ್ಲಿ ಆಕಸ್ಮಿಕವಾಗಿ
ಸಂದಿಸುತ್ತಿದ್ದದ್ದು ನಿನಗೂತ್ತೆಂಬುವದು ನನಗೊತ್ತು.

ಕಳ್ಳ ಬೆಕ್ಕು ನಿನ್ನ ಕುಡಿನೋಟಕ್ಕೆ ಸೊಕ್ಕು
ಬೀದಿ ನಾಯಿಯಾಗಿ ಸುತ್ತಿದ್ದು
ಛಪ್ಪನ್ನಾರು ಊರುಗಳಿಗೆಲ್ಲ ಗೊತ್ತು
ಮಜವಿತ್ತು, ಮುದವಿತ್ತು ಹೂರಿ
ನೋಟಗಳ ಹೊಯ್ದಾಟ ಚೆಲುವಾಗಿತ್ತು
ತಂಗಾಳಿ ಕೂಟ ನಮ್ಮೂಟ
ಮಟ ಮಟ ಮಧ್ಯಾಹ್ನಗಳ ಮಸ್ತಾಗಿಸುತ್ತಿತ್ತು.

ಆ ತಿರುವುಗಳು ಮರೆಯಾಗಿವೆ
ನಿನ್ನ ಕರುಳಬಳ್ಳಿಗಳ ದಿಕ್ಕು ಬದಲಾಗಿವೆ
ಮರೆಯೆಂದರೆ ಮರೆಯಲ್ಹೆಂಗೆ
ಮೇರೆಯಿಲ್ಲದ ನುಗ್ಗಿ ಬರುವ ತೊರೆ
ನೆರೆ ಮುಗಿದಾದ ಮೇಲೆ ಬರೀ ನೊರೆ
ನಾರಿ ನಾರೀ ನೀನಾರೇ ನಾರೀ ನಾರೀ
ಎನದಿರು ಸೋ ಸ್ವಾರಿ ಸ್ವಾರೀ ರೀ ಸ್ವಾರೀ
ಮಾಗಿ ಮೆರೆಯುತ್ತಿದ್ದಿದ್ದೆಲ್ಲಾ
ಬಾಗಿ ಬೆಂದು ಮರೆಯಾಗಿವೆ
ಪರಿಚಿತ ದಾರಿಯಲ್ಲಿ ಅಪರಿಚಿತರ
ಪಾತ್ರ ಪ್ರಪಂಚ ಮುಂದುವರಿಯುತ್ತಿದೆ.

ಕಂಭಕ್ಕಾತು ನಿಲ್ಲುವದಿಲ್ಲ 

ಸಮಾನತೆಗಾಗಿ

        ಸಮಾನತೆಗಾಗಿ
ರಾಮಕೃಷ್ಣ ಗರ್ಭದ ಕಲ್ಲಾದ
ಬುದ್ದ ಬಸವಳಿದು ಬಿದ್ದ
ಅಲ್ಲಮ ಮೆಲ್ಲನೆದ್ದು ಹೋದ
ಮೋಹನದಾಸನಾಶಿಸುತ್ತ ಅಸುನೀಗಿದ
ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ
ಮಳೆ ಸುರಿಯಿತು ಮರುಭೂಮಿಯ ಮೇಲೆ
ಕೊಳೆ ಬೆಳೆಯಿತು ಮನುಜರರಿವಿನೊಳಗೆ
ಬರಬೇಕಾದವರೆಲ್ಲಾ ಬಂದು ಹೋದರು
ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು
ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು.
ನ ಹನ್ಯತೆ ಅಸಮಾನತೆ
ಕೊಲ್ಲಬಂದವರೆಲ್ಲಾ ಕಾಲವಾದರೂ
ಕಾಲೂರಿಕೊಂಡ ಕೊಳೆತದ ನಾತ
ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ
ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ
ಮನೆ ಮನೆಗಳಲ್ಲಿ ಮುದುಡಿದ ಮನಗಳು
ತೆರೆ ತೆರೆದ ಕಿಂಡಿಗಳಿಂದ ಹೊರ ಹೊರಡಲಿ
ಕುಲ ಕುಲವೆನ್ನುವ ಕಾರಿರುಳು
ಒಳ ಹರಡಲಿ ಕಾಂತಿಯ ಸುಡುನೆರಳು
ಸಹಜಾತಿ ಸುಖಕಿಂತ ಮಿಗಿಲು ಮಾನವೀಯತೆ
ಮೂರನೂರು ಉಂಡ ಹೊಟ್ಟೆಗಳ
ತಣಿಸುವದಕ್ಕಿಂತ ಮಿಗಿಲು
ಮೂರು ದಣಿದ ಮೈಗಳಿಗೆ
ಸಂತೈಸುವೆರೆಡು ಕೈಗಳು
ಸಾವಿರ ಪುಟಗಳ ಸಮೃದ್ಧ
ಸಮಾನತೆಯ ಸಾಹಿತ್ಯಕ್ಕಿಂತವಧಿಕ
ಒಬ್ಬ ಬಡವನ ಕಣಿವೆಯೊಡಲಲ್ಲಿ
ಬೆಳೆ ನಳಿನಳಿಸುವದು
ಬವಣೆಯ ಕಳೆ ಕೀಳುವದು
ಬನ್ನಿ ಜಗದೊಧ್ಧಾರಕರ ಅನಗತ್ಯವಾಗಿಸುವ.

 ಸಮಾನತೆಗಾಗಿ

Wednesday, January 29, 2014

ಪಾಪ ಪಪ್ಪಾಯ


ಮೂಕಜ್ಜನ ಸೋಲು - ಭಾಗ ೨

                                                             ಮೂಕಜ್ಜನ ಸೋಲು - ಭಾಗ ೨

 ಯಾವದೇ ಪ್ರಚಲಿತ ಸಮಸ್ಯೆಗೆ ಒಂದು ಆರೋಗ್ಯಪೂರ್ಣ ಚರ್ಚೆಯಿಂದ ಸಮಾಧಾನ ಕಂಡುಕೊಳ್ಳಬೇಕು ಅನ್ನುವದು ಮೂಲ ಉದ್ದೇಶ - ಅಂತೆಯೇ ಮುಕ್ತ ಮನಸ್ಸಿನ ಮಾತುಕಥೆ ಅಗತ್ಯವಾದದು. ಇಲ್ಲೊಂದೆರಡು ಅಗತ್ಯವಾಗಿ ಮನನವಾಗಬೇಕಾದ ವಿಷಯಗಳು. ಮನಸ್ಸು ಎಲ್ಲ ಸ್ವಭಾವಗಳಿಗೂ ಮೂಲ. ಸ್ವಭಾವ ಬೇಕಾಗಿಯೋ ಬೇಡವಾಗಿಯೋ ಸಂಸ್ಕಾರ,ಸಂಸ್ಕ್ರತಿಯಿಂದ ಪ್ರಭಾವಿತವಾಗಿರುತ್ತದೆ. ಈ ಸಂಸ್ಕ್ರತಿ ಕೂಡಾ ಮಾನವನ ಒಟ್ಟೂ ವಿಕಾಸದ ಮಜಲೆ. ಆ ನಿಟ್ಟಿನಲ್ಲಿ   ಪ್ರಪಂಚದ ಎಲ್ಲ ಸಂಸ್ಕ್ರತಿಗಳ ಮೂಲವೂ ಒಂದೆ. ಪ್ರಾಣಿ ಸಹಜ ಮೂಲ ಪ್ರವೃತ್ತಿಯಿಂದ ಸ್ವಲ್ಪ ಮೇಲೆ ಬಂದು ಸಮಾಜಮುಖಿಯಾದ ಮಾನವನ ದೃಷ್ಟಿಯಿಂದ ನೋಡಿದಾಗ ಈ ನಿಟ್ಟಿನಲ್ಲಿ ನಿಚ್ಚಳವಾಗಿ ಗೋಚರಿಸುವ ಕೆಲವು ಸತ್ಯಗಳಿವು. 

೧) ತಮ್ಮಂತಿರದ ಬೇರೆಲ್ಲರ ಬೇಕು ಬೇಡಗಳನ್ನು ಒಂದು ಸರ್ವಸಮ್ಮತ  ಚೌಕಟ್ಟಿನಲ್ಲಿ  ಗೌರವಿಸುವದು.
೨) ಎಲ್ಲ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತವಾದದ್ದು, ಲೈಂಗಿಕತೆ ಅತ್ಯಂತ ಖಾಸಗಿಯಾದದ್ದು.
೩) ಇನ್ನೊಬ್ಬರ ಹಕ್ಕು, ಅವಕಾಶ ಎಗರಿಸುವ ವ್ಯವಸ್ಥೆ ವಿರುದ್ದ ನಾವೆಲ್ಲ ಸೆಟೆದೇಳುವದು ಮಾನವೀಯತೆಯ ಲಕ್ಷಣ.
೪) ಪ್ರಕೃತಿದತ್ತವಾದ ಯಾವದೇ ವಿಷಯಕ್ಕೂ ಶಿಕ್ಷೆ ವಿಧಿಸುವ ಅಥವಾ ಹತೋಟಿಯ ಹಕ್ಕು ನ್ಯಾಯಾಲಯಗಳಿಗಿಲ್ಲ.

ನಮಗೆ ಇಲ್ಲಿಯವರೆಗೂ ಗೊತ್ತಿರುವ ಎಲ್ಲ ಮೂಲಗಳಿಂದ ನೋಡುವದಾದರೆ ಸಲಿಂಗಕಾಮ ಮನೋರೋಗವಲ್ಲ, ಅನಾರೋಗ್ಯವೂ ಅಲ್ಲ. ಸಲಿಂಗ ವಂಶ ವಾಹಿಗಳಿನ್ನು ಯಾರು ಇನ್ನೂವರೆಗೆ ಕಂಡುಹಿಡಿಯಲಾಗದಿದ್ದರೂ ಅದರ ಮೂಲ ಜೀವವಿಜ್ಞಾನದ ಸೆಲೆಯಲ್ಲಿ ಇದೆ ಎಂಬುವದು ನಿರ್ವಿವಾದ. ಸಲಿಂಗ ಕಾಮಿಗಳಿಗೂ ಎಲ್ಲರಂತೆ ಗೌರವಯುತವಾಗಿ ಬಾಳುವ ಹಕ್ಕು ಸಂವಿಧಾನದಲ್ಲಿ, ಸಮಾಜದಲ್ಲಿ ಇರಲೇಬೇಕು. ಇವೆಲ್ಲವೂ ಪ್ರಶ್ನಾತೀತವಾಗಿ ದೊರಕಲೆ ಬೇಕಾದ ಪರಭಾರೆ ಮಾಡಲಾಗದ ಹಕ್ಕುಗಳು.

 ಮೊನ್ನೆ ಓ.ಎಲ್.ನಾಗಭೂಷಣ ಅವರ ಲೇಖನವೊಂದನ್ನು ಓದುತ್ತಿದ್ದೆ. ಅದನ್ನಿಲ್ಲಿ ಈ ಸಮಸ್ಯೆಗೆ ಹೊಂದಿಸಿಕೊಂಡು ನೆನೆಪಿದ್ದಷ್ಟು  ಉದ್ದರಿಸಿದರೆ ತಪ್ಪಾಗಲಿಕ್ಕಿಲ್ಲ ಎನಿಸುತ್ತದೆ. ತೋರಿಕೆಯೇ ಧರ್ಮವಾಗಿದೆ ಈಗ. ಅಲ್ಲಮ ಹೇಳಿದಂತೆ 'ಆಚಾರವನೆ ಕಂಡರು, ವಿಚಾರವನೆ ಕಾಣರು', ಇದರ ನೇರ ಪರಿಣಾಮದ ಫಲಶ್ರುತಿಯೇ ಈ ಅತೀ ಸ್ವಾತಂತ್ರ್ಯಕ್ಕೆ, ಸ್ವೇಚ್ಛಾಚಾರಕ್ಕೆ ಕಾರಣವೇನೋ ಅನಿಸುತ್ತದೆ ಕೆಲವೊಮ್ಮೆ. ತನಗೆಲ್ಲ ಗೊತ್ತು ಎಂಬ ಅಹಂ ತನ್ನ ಅನುಭವವೆ ಅನುಭಾವವೆಂದು ತಪ್ಪಾಗಿಸಿಕೊಳ್ಳುತ್ತದೆ. ಎಲ್ಲ ಘಟನೆಗಳು, ಕಾರ್ಯಕಾರಣಗಳು ತನ್ನನ್ನು ಮೀರಿ ಇಲ್ಲ ಎಂಬ ಭಾವನೆ ಬಲವಾದಗ ಅಲ್ಲಿ ನಂಬಿಕೆ ಕಮ್ಮಿಯಾಗಿ ಅಲ್ಲೊಂದು ನಿರ್ವಾತ ಸ್ತಿತಿ ಉದ್ಭವಿಸಿ ಬಾಹ್ಯ ಒತ್ತಡಗಳು ಅದನ್ನು ಆಕ್ರಮಿಸಿಕೊಳ್ಳುತ್ತವೆ ಎಂಬ ಎಚ್ಚರ ನಮಗಿರಬೇಕಾದದ್ದು ಅತ್ಯಗತ್ಯ. ಇದನ್ನು ಇನ್ನೂ ಒಂದು ಬದಿಯಿಂದ ನೋಡಬಹುದು - ಅಲ್ಲಮನ ಮಾತಿನಂತೆ 'ತನು ಒಂದು ದ್ವೀಪ, ಮನ ಒಂದು ದ್ವೀಪ, ಆಪ್ಯಾಯನ ಒಂದು ದ್ವೀಪ'. ದೇಹ, ಮನಸು, ತೃಪ್ತಿ ಎಂಬ ಮೂರು ವೆಕ್ಟರಗಳು (vector) ಒಂದನ್ನೊಂದು ಬೇರೆ ಬೇರೆ ದಿಕ್ಕಿನಲ್ಲಿ ಹಿಗ್ಗಾ ಮುಗ್ಗಾ ಎಳೆದಾಡುತ್ತ ನಮ್ಮ ಬದುಕು ಈ ಮೂರು 'ಬಲ' ಗಳ ಒಟ್ಟೂ ಫಲಿತಾಂಶದಿಂದ ಸ್ವಯಂ ನಮ್ಮ ಅಂಕೆ ಮೀರಿ - ಯಾವ ಕ್ಷಣದಲ್ಲಿ , ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುವದು ಕೂಡಾ ಮರೆಯಾಗಿ - ಪ್ರವಾಹಕ್ಕೆ ಸಿಕ್ಕ ತರಗಲತೆಯಂತೆ ಸುತ್ತುತ್ತಲಿದ್ದೇವೋ ಎನಿಸಬಹುದು. ತನು, ಮನ,ತೃಪ್ತಿ ಮನುಷ್ಯರ ಬಾಳನ್ನು ನಿರ್ಧರಿಸುವ ಮೂರು ಮುಖ್ಯ ಧಾರೆಗಳು - ತನುವಿನ ಬಯಕೆ ಆಶೆ, ಆಕಾಂಕ್ಷೆ , ಲೌಕಿಕವೂ, ಐಹಿಕವೂ ಆದರೆ ಮನದ್ದು ದೇವ-ಧರ್ಮದ್ದು,ನಂಬಿಕೆಯದು, ಮಾನವ ಪ್ರೇಮದ್ದು. ತೃಪ್ತಿ ವಿಚಾರ, ತರ್ಕ, ಆಧ್ಯಾತ್ಮಿಕ ಅರಿವು ಕಾಣುವ ಯತ್ನ. ಹಟಕ್ಕೆ, ಅಹಂಗೆ ಇದು ಕಾರಣ. ಇದು ಒಂದು ಥರದಲ್ಲಿ ಹೆಚ್ಚುಗೆಯಿಂದ (affluenza) ಉದ್ಭವಿಸಿದ ಸಮಸ್ಯೆಯೇ ಹೊರತು ಸಮೃದ್ಧಿಯ ಅಭಾವದಿಂದಾದದ್ದಲ್ಲ -ಅದ್ದರಿಂದಲೆ ಇದನ್ನು ಸರಿಯಾಗಿ ಗುರುತಿಸುವದು ಗುರುತರವಾದದ್ದು -ಇಲ್ಲದಿದ್ದರೆ ಪರಿಹಾರ ಅಸಾಧ್ಯ. ಎಲ್ಲದಕ್ಕೂ ದೊಡ್ಡಣ್ಣ ಅಮೆರಿಕವನ್ನು ಅನುಸರಿಸುವದರಿಂದ ಆಮದಾಗಬಹುದಾದ ಸಮಸ್ಯೆಗಳನ್ನು ನಮ್ಮ ನೆಲೆದಿಂದ, ನೆಲೆಯಿಂದ ಅರಿತುಕೊಳ್ಳುವದು ಅಗತ್ಯ. ನಮ್ಮ ದೇಹ, ಬುದ್ಧಿ, ಮನಸ್ಸುಗಳನ್ನು ತಿದ್ದಿಕೊಳ್ಳುತ್ತ, ಹೊಸದನ್ನು ತಾಳ್ಮೆಯಿಂದ ಪರಿಷ್ಕರಿಸುತ್ತಾ ನಾವೀಗ ಮುನ್ನಡೆಯಬೇಕು ಇಲ್ಲದಿದ್ದರೆ ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ ಆಗಬಹುದು ನಮ್ಮ ಪರಿಸ್ಥಿತಿ.

 ಅತೀ ಸ್ವೇಚ್ಛಾಚಾರ, ವ್ಯಕ್ತಿ ಸ್ವಾತಂತ್ರ್ಯಕ್ಕೂ - ಸ್ವಾಸ್ಥ್ಯಸಮಾಜದ ನಡುವಳಿಕೆಗೂ ನಡುವಿರುವ ತೆಳು ಗೆರೆಯನ್ನು ಕಾಲಿನುಂದುಜ್ಜಿ ಮುಕ್ತತೆಯನ್ನು ವೈಭವಿಕರಿಸುವ ಈ ಚಾಳಿ ಹೊಸದೇನಲ್ಲ.  ಯಾವದೋ ಒಂದು ಲೇಬಲ ಹಚ್ಚಿ ಸಲಿಂಗಕಾಮವನ್ನು ಮುಖ್ಯ ಧಾರೆಗೆ ಎಳೆದು ತರುವ ಪ್ರಯತ್ನ ಅವಿರತವಾಗಿ ನಡೆಯುತ್ತಲಿದೆ. ಅದರ ಹೆಚ್ಚಳವನ್ನು ಸ್ವಲ್ಪ ಮಾತ್ರವೂ ಪ್ರಶ್ನಿಸುವವರನ್ನು ಪ್ರತಿಗಾಮಿ ಎಂದೆ ಜರಿಯಲಾಗುತ್ತದೆ ಈ ಹೆಚ್ಚಳವನ್ನು ಪ್ರಶ್ನಿಸುವದು ಕೂಡಾ ನಮ್ಮ ಜವಾಬುದಾರಿಯೆ. ಮೊನ್ನೆ ಕನ್ನಡದ ಹೆಸರಾಂತ ಲೇಖಕಿಯ ಒಳ್ಳೆಯ, ಮಾನವೀಯತೆಯ ಕಥೆ ಓದುತ್ತಲಿದ್ದೆ - ಒಬ್ಬ ಅಜ್ಜ ಮೊಮ್ಮಗಳ ಮಧ್ಯದ ಆಪ್ತ ಕಥೆ. ಕೊನೆ ಮುಟ್ಟುವವರೆಗೂ  ಎಲ್ಲಿ ಆ ಅಜ್ಜನ ಇನ್ನೊಂದು ಮಗ್ಗಲು ತೋರಿಸಲು, ಲೇಖಕಿಯ ಅದ್ಭುತ ಕಾಣ್ಕೆ ತೋರಿಸಿಕೊಳ್ಳಲು, ಪ್ರಗತಿಪರವೆಂದು ಬಿಂಬಿಸಿಕೊಳ್ಳಲು ಇಲ್ಲ ಸಲ್ಲದ್ದೆಲ್ಲವನ್ನೂ ಎಳೆದು ತರಲಾಗುತ್ತದೋ ಎಂದು ಆತಂಕಿತನಾಗಿದ್ದೆ. ಎಲ್ಲಿ ಇದರಲ್ಲಿ  ಕಪೋಲಕಲ್ಪಿತ ವಿಚಾರಧಾರೆಗಳನ್ನು ನುಸಳಿಸಿ ತಮ್ಮ ದೃಷ್ಟಿಯೇ ಸರ್ವಶ್ರೇಷ್ಟ, ಮಾನವತಾವಾದಿ ಎಂದು ಬೀಗುತ್ತಾರೋ ಎಂದು ಹೆದರಿದ್ದೆ.ಅಬ್ಬಾ ಅಂತಹದೇನೂ ಇಲ್ಲವಲ್ಲ ಎಂದು ನಿಬ್ಬೆರಗಾಗಿ ನಿಸೂರಾದೆ. ಕಾರಂತರ ಮೂಕಜ್ಜಿಯಂತೆ ಎಲ್ಲ ಕಾಣುವ ದಿವ್ಯ ಚಕ್ಷುವಿನ ಸವಾಲಿದು.  ಇಲ್ಲಿನ ಸವಾಲೆಂದರೆ ಯಾವದನ್ನು ಅಕ್ಕರೆ, ಒಲವು, ಒಲುಮೆ, ವಾತ್ಸಲ್ಯ, ಮಮತೆ ಎಂದುಕೊಳ್ಳುತ್ತಿದ್ದೆವೋ ಅದನ್ನು ವ್ಯವಸ್ಥಿತವಾಗಿ ಹೊಸಕಿ ಹಾಕಿ ಎಲ್ಲದಕ್ಕೂ ನಮಗೆ ತಿಳಿಯಲೇಬೇಕಾದ ಕಾರಣವನ್ನು ಭೂತಕನ್ನಡಿ ಇಟ್ಟು ಹುಡುಕಿ ಆಹಾ ನಾನು ಹೇಳಿರಲಿಲ್ಲವೆ ಇದು ಹೀಗೆ ಎಂದು ಕುಣಿದಾಡುವ ಪರಿ -ಇನ್ನೂ ಕೆಲವರು ಇನ್ನೂ ಮುಂದುವರಿದು ಸಲಿಂಗಕಾಮವನ್ನು ಸ್ವಲ್ಪ ಪ್ರಶ್ನಿಸಿದರೂ ಕೂಡಾ ಅದನ್ನು ನಮ್ಮ ಅರಿವಿನ ಕುಂದೆಂದೂ ನೂರೋ, ಇನ್ನೂರೋ ವರುಷದ ಹಿಂದೆ ಕೂಡಾ ಹೀಗೆಯೇ ನಾವು ಅಸ್ಪೃಶ್ಯತೆಯ ಬಗ್ಗೆ, ದಾಸ್ಯದ ಬಗ್ಗೆ ತಪ್ಪು ಭಾವಿಸಿರಲಿಲ್ಲವೆ ಎಂದು ತಪ್ಪು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ನಮಗೆ ಜೊಳ್ಳನ್ನು ಗಟ್ಟಿಯಿಂದ ಬೇರ್ಪಡಿಸುವ ಎಚ್ಚರವಿರಬೇಕಾದದ್ದು ಅತ್ಯಗತ್ಯ.

 ಎಲ್ಲ ಸತ್ಯಗಳಿಗೂ ಅತ್ಯಂತ ಕಿರು ಮುಗಿತಾಯ (short shelf life) ದ ಕಾಲದಲ್ಲಿದ್ದೇವೆ ನಾವೀಗ. ನನ್ನ ದನಿಯೂ ಸಾಮಾಜಿಕ ಬಹು ಜನರ ನುಡಿಯೊಡನೆ ತಾಳೆಯಾದರೆ ಮಾತ್ರ ಸರಿ ಇಲ್ಲದಿದ್ದರೆ ತಪ್ಪಿದ ಶೃತಿಯಾಗಬಹುದು ಎನ್ನುವ ಹೆದರಿಕೆಯಲ್ಲಿ ಮಾಡಿಕೊಳ್ಳುವ ಒಪ್ಪಂದದಂತೆ ಪ್ರತಿಯೊಬ್ಬರು ಯೋಚಿಸುತ್ತಿದ್ದಾರೆ. ಇದು ಸಮಾಜಮುಖಿಯಾಗುವದರ ಜೀವಾಳ, ತಿರುಳು ಎಂಬ ಹುಸಿ ಕಲ್ಪನೆ. ಯಾರನ್ನೂ, ಯಾಕೆ ನೋಯಿಸಬೇಕು ಅಥವಾ ಯಾರನ್ನೂ ನೋವಿಸದವರ ಥರಹ ಕಾಣಿಸಿಕೊಳ್ಳುವದು ಹೇಗೆ ಎಂಬ ಹಪಾಪಿತನ. ಸಮ ಹಕ್ಕಿನ ವಿಲೋಮ ಪ್ರಯೋಗವಿದು. ಅಮೆರಿಕೆಯಲ್ಲಿ ತುಂಬಿ ತುಳುಕಾಡುವ ಬಂದೂಕಿನ ಸಮಸ್ಯೆಗೆ ಎನ.ಆರ.ಎ.(National Rifle Association) ಗಳ ತಲೆತಿರುಕ ಸಲಹೆಗಳಂತಿರುತ್ತವೆ ಇವು. ಅದಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುವ, ಹಣ ಖರ್ಚು ಮಾಡುವ ಅನೇಕರಿದ್ದಾರೆ. ನೈತಿಕವಾದ ಯಾವದು ಇವರಿಗೆ ಸಲ್ಲದ್ದು - ಅದೆಲ್ಲ ಗೊಡ್ಡು ಸಂಪ್ರದಾಯ ಹಾಗೂ ಮುರಿಯಲೇ ಬೇಕಾದದ್ದಾಗಿ ಕಾಣುತ್ತವೆ ಇವರಿಗೆ. ಇವರೆಲ್ಲಾ ನೂರಕ್ಕೆ ಎಪ್ಪತ್ತರಷ್ಟು ಒಳ್ಳೆಯವರೆ, ಒಳ್ಳೆಯ ಸದುದ್ದೇಶದಿಂದ ಕೂಡಿದವರೆ -ಸಂದೇಹವಿಲ್ಲ. ಯಾವದನ್ನು ನಮ್ಮಿಂದ ತಡೆಗಟ್ಟುವದು ಅಸಾಧ್ಯವೋ ಅದರ ಬಗ್ಗೆ ತಟಸ್ಥವಾಗಿರುವದು ಜಾಣತನವಷ್ಟೆ ಅಲ್ಲ, ಅದೂ ನಮ್ಮ ಕರ್ತವ್ಯ ಕೂಡಾ ಎಂಬ ನಿಲುವಿನವರಿವರು. ಇಲ್ಲಿ ವಿವೇಚನಾ ಪ್ರಜ್ನಾವಂತಿಕೆಯೆಂದರೆನೆಂದು ಹೇಳುವದು ಕಷ್ಟವಾದರೂ ಸ್ವಲ್ಪ ಮಾತ್ರವು ವ್ಯವಹಾರ ಪ್ರಜ್ಞೆಯಿರುವವರು ಇದರ ಪಥಕರಣದ ಅಂತಿಮತೆ ಗುರುತಿಸದೆ ಇರಲಾರರು. ದೊಡ್ಡ ಬೆಳಕೆಂದು ಸೂರ್ಯನ ನಿರೂಕಿಸುತ್ತ ಇದ್ದ ಕಣ್ಣುಗಳನ್ನು ಕುರುಡಾಗಿಸಿಕೊಂಡತ್ತಲ್ಲವೆ ಇದು?  ಸ್ವಾನುಭವವನ್ನು ನಮ್ಮ ಸಂಪ್ರದಾಯಕ್ಕೆ ಒಗ್ಗಿಸುವ ಕೆಲಸವನ್ನು ನಾವು ತುರ್ತಾಗಿ ಮಾಡಬೇಕಾಗಿದೆ.

 ಅಂದ ಹಾಗೆ ಈ ಮೊದಲು ಹೇಳಿದ ಶಿಖರಭಾನು ಎಂದೂ ಯಾವ ಗುಡ್ಡ, ಬೆಟ್ಟ, ಗಿರಿ, ಪರ್ವತ ಏರಿಲ್ಲ, ಏರುವ ಇರಾದೆಯಿರುವವನು, ಯಾರೋ ಏರಿದ್ದನ್ನು ಕೇಳಿದವನು ಮಾತ್ರ.