Monday, June 9, 2014

ಬೇಂದ್ರೆ -ನಲ್ಲ ನಲ್ಲೆಯರ ಲಲ್ಲೆ

ಬೇಂದ್ರೆ ಅವರ ‘ನಲ್ಲ ನಲ್ಲೆಯರ ಲಲ್ಲೆ’ 

June 9, 2014
ಅನಿಲ್ ತಾಳಿಕೋಟೆ


ನಲ್ಲ : ‘ನಲ್ಲೆ ! ನಿನ್ನ ಲಲ್ಲೆವಾತು
ಮುಗಳುನಗೆಯಲಲ್ಲೆ ಹೂತು
ಸೋತು,ಓತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.

ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಮೀಸೆ ಕುಡಿಯಲ್ಲಲ್ಲೆ ಹೂತು
ಕುಣಿದು,ಮಣಿದು,ಬಂತು,ಹೋ’ತು
ನಲ್ಲ!ನಿನ್ನ ಲಲ್ಲೆ ವಾತು.’

ನಲ್ಲ : ‘ನಲ್ಲೆ ! ನಿನ್ನ ಲಲ್ಲೆ ವಾತು
ಕಣ್ಣ ಕಿರಣದಲ್ಲಿ ನೂತು
ನೇತು,ಜೋತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.

ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಹುಬ್ಬು-ಬಿಲ್ಲಿನಲ್ಲೆ ಆತು
ಸಿಡಿದು, ಮಿಡಿದು ಬಂತು,ಹೋ’ತು
ನಲ್ಲ! ನಿನ್ನ ಲಲ್ಲೆ ವಾತು.’

ನಲ್ಲ : ‘ನಲ್ಲೆ ! ನಿನ್ನ ಮಾತಿನಲ್ಲೆ
ಹುಟ್ಟಿ ಬಂತು ಹುಟ್ಟು-ಲಲ್ಲೆ ;
ಹೂಂಗುಟ್ಟಿ ಹುದಗಬಲ್ಲೆ,
ಒಲ್ಲೆಯೆಂದು ಒಲಿಸಬಲ್ಲೆ.;

ನಲ್ಲೆ: ‘ನಲ್ಲ! ನಿನ್ನ ಮಾತಿನಲ್ಲೆ
ಎದೆ ಮೃದಂಗದೊಂದೆ ಸೊಲ್ಲೆ
ಹುಚ್ಚು ಹಿಡಿಸಿ ನುಡಿಸಬಲ್ಲೆ;
ಹಿಡಿದ ಹುಚ್ಚು ಬಿಡಿಸಬಲ್ಲೆ’

ನಲ್ಲ : ‘ನಲ್ಲೆ ! ನೀನು ಮಲೆಯ ಮೊಲ್ಲೆ
ನಿನ್ನ ಮೃದು ಸುಗಂಧ ಲಲ್ಲೆ;
ಅದರ ಸವಿಯ ಧ್ಯಾನದಲ್ಲೆ
ಏಕತಾನಮಾನವಲ್ಲೆ?’

ನಲ್ಲೆ: ‘ನಲ್ಲ! ನಿನ್ನ ಉಸಿರಿನಲ್ಲೆ
ಗಾನದೊಂದು ಗಮಕವಿಲ್ಲೆ?
ಆ ಪ್ರಾಣವಿಲ್ಲದಲ್ಲೆ
ಗಾಳಿಮಾತು ಜೊಳ್ಳು ಲಲ್ಲೆ!’
‘ಬಾನು ಬೆಳಕು ಹೂಡಿದಲ್ಲೆ
ಕಡಲಿನಲ್ಲಿ ಮೂಡಿದಲ್ಲೆ;
ನಲ್ಲ ನಲ್ಲೆ ಕೂಡಿದಲ್ಲೆ
ಹಿಗ್ಗಿಗುಂಟೆ ಮೇರೆ ಎಲ್ಲೆ?’

ಕೆದಕಿ, ಬೆದಕಿ, ಸಮರಸದಲ್ಲಿ ತೇಲುತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಸೀಮಿತ ಪರಿಧಿಯಲ್ಲಿ ನಲ್ಲ ನಲ್ಲೆಯರು ತೃಪ್ತಿಯ ಉತ್ತುಂಗಕ್ಕೆ ಏರಬಹುದು ಎನ್ನುವದಕ್ಕೆ ಉದಾಹರಣೆಯಾಗಿ ಇದಕ್ಕಿಂತ ಒಳ್ಳೆಯ ಕವಿತೆಯನ್ನು ನಾನು ಇದುವರೆಗೂ ಓದಿಲ್ಲ. ನಾಲ್ಕಾರು ದಶಕಗಳ ಹಿಂದೆ ಮನೆಯಲ್ಲಿ ಕನಿಷ್ಟ ಎಂಟೋ ಹತ್ತೋ ಸದಸ್ಯರಿರುವಲ್ಲಿ, ಕಾಂತ-ಕಾಂತೆಯರಿಗೆ ಏಕಾಂತ ಎನ್ನುವದು ಅತ್ಯಂತ ದುರ್ಲಭವಾದ ಕಾಲದಲ್ಲಿ ಸಿಕ್ಕ ಕ್ವಚಿತ್ತಾದ ಸು-ಸಂದರ್ಭದಲ್ಲಿ ಮುದ್ದಣ-ಮನೋರಮೆಯರಾಗುವದು ಅನಿವಾರ್ಯವಾಗಿರುತ್ತಿತ್ತು.

ಅತ್ಯಂತ ಸರಳವಾಗಿಯೂ ಮಹೋನ್ನತವಾಗಿ ಪರಿಣಾಮಕಾರಿಯೂ ಆಗಿರುವ ಈ ಗದ್ಯದಂತಹ ಪದ್ಯ ಬೇಂದ್ರೆಯವರ ರಸಿಕತೆಯನ್ನು ಓದುಗನಲ್ಲಿ ಎರಕ ಹೊಯ್ಯುತ್ತದೆ. ಡಿ.ವಿ.ಜಿ. ಹೇಳಿದಂತೆ ‘ಧನಿಕರಾಗುವದು ಎಲ್ಲರಿಗೂ ಸಾಧ್ಯವಿಲ್ಲ, ಕೊಂಚ ಪ್ರಯತ್ನದಿಂದ ಎಲ್ಲರೂ ರಸಿಕರಾಗಬಹುದು’. ಎಲ್ಲರಲ್ಲಿ ಹಿಗ್ಗು ಹಿಗ್ಗಿಸಲು ಇಂತಹ ಕವಿತೆ ಕಾಲ, ದೇಶಗಳ ವ್ಯಾಪ್ತಿ ಮೀರಿ ನಿಲ್ಲುತ್ತವೆ ಎಂಬ ಅಖಂಡ ನಂಬುಗೆ ನನ್ನದು. ಪ್ರೇಮ-ಕಾಮವನ್ನು ಎಲ್ಲೆಂದರಲ್ಲಿ , ಯಾವ ಎಗ್ಗಿಲ್ಲದೆ ಪ್ರದರ್ಶಿಸಬಹುದಾದ ಅಮೆರಿಕೆಯಲ್ಲಿ ಯಾವದೇ ಕಾಲದ್ದಾದರೂ ಪರವಾಗಿಲ್ಲ ಇಂತಹದೊಂದು ನವಿರಿನ ಕಾವ್ಯ ಓದಿಲ್ಲ ಎಂದಾಗ ಗೆಳತಿಯೊಬ್ಬಳು ‘ಅದು ನಿನ್ನ ಅಲ್ಪ ಓದಿನ ಪರಿಣಾಮ’ ಎಂದದ್ದನ್ನು ಶಿರಸಾ ಒಪ್ಪುತ್ತೇನೆ. ಅಂತೇಯೇ ಬೇಂದ್ರೆ ಎಂಬ ಮಹಾ ಮಾಂತ್ರಿಕ ಉದುರಿಸಿದ ಗರಿಗಳನ್ನು ಎತ್ತಿ ಹಿಡಿದು ಕಣ್ಣತ್ತ ಒಯ್ಯುವ ಅಥವಾ ಮೂಸಿ ನೋಡುವ ಸಾಮರ್ಥ್ಯ ನನಗೆ ಖಂಡಿತ ಇಲ್ಲವೆಂದು ಒತ್ತಿ ಹೇಳುತ್ತೇನೆ. ಹಾರಿ ಹೋಗುತ್ತಿರುವ ಆ ಗರಿಗಳನ್ನು ದೂರದಿಂದ ನೋಡಿ ಆನಂದಿಸಲು, ಮುಂದೆ ಎಂದಾದರೊಮ್ಮೆ ಒಂದಾದರೂ ಲಘುಸ್ಪರ್ಶ ಮಾಡಿ ನನ್ನ ಕೆನ್ನೆ ನೆವರಿಸಿ ಹೋದೀತೇನೋ ಎಂಬ ಆಶೆ ಎಂದಿನಿಂದಲೂ ಇದ್ದಿದ್ದೆ.
ಕವಿತೆಯ ಕಾಲ, ಅಂದಿನ ವಾತಾವರಣ ನಮಗೆಲ್ಲಾ ಅಷ್ಟೋ-ಇಷ್ಟೊ ಗೊತ್ತಿದ್ದದ್ದೆ ಆದ್ದರಿಂದ ಅದರ ಬಗ್ಗೆ ಜಾಸ್ತಿ ಹೇಳುವದು ಅನವಶ್ಯಕ ಎಂದುಕೊಳ್ಳುತ್ತೇನೆ. ಇಂಗ್ಲಿಷಿನ ರೋಮ್ಯಾಂಟಿಕ ಕಾವ್ಯದ ಸಾರವನ್ನೆಲ್ಲಾ ಅರೆದು ಕುಡಿದ ಕವಿಮನಸ್ಸಿಗೆ ನಲ್ಲೆಯನ್ನು ಲಲ್ಲೆಗರೆಯುವ ಆಶೆ. ‘ನಿನ್ನ ಗಂಡ ಹೇಗಿದ್ದಾನೆ?’ ಎಂದರೆ, ಫೆಸಬುಕ್ಕಿನಲ್ಲಿ ‘ಗಂಡ ಎನ್ನುವವನು ಹೇಗಿರಬೇಕೋ, ಎಲ್ಲಿರಬೇಕೋ ಅಲ್ಲೆ ಬಿದ್ದು ಕೊಂಡಿದ್ದಾನೆ’ ಎನ್ನುವ ಉತ್ತರ ಕೊಡುವ ಕಾಲವಂತೂ ಆವಾಗ ಇರಲಿಲ್ಲ. ಅದೂ ಬಿಡಿ – ಉತ್ತರ ಕರ್ನಾಟಕದಲ್ಲಿ, ಮೈಸೂರಿನವರಂತೆ ಆಗ ಹೆಂಡತಿಗೆ ಮಲ್ಲಿಗೆ ತಂದು ಮುಡಿಸಿ ಮುದ್ದುಗರೆಯುವ ಗಂಡಸರೂ ಇರಲಿಲ್ಲ -ನೂರು ಕೆಲಸದ ನಡುವೆ ಅಂತಹದೊಂದು ಬಯಕೆ ಹೆಂಡತಿಗೆ ಬರಲಿಕ್ಕೆ ಸಾಧ್ಯವೂ ಇರಲಿಲ್ಲ. ಗಂಡ ದುಸುಮುಸು ಮಾಡದೆ ಮನೆಗೆ ಬಂದರೆ ಅದೇ ಪುಣ್ಯ. ‘ಏನೇ?, ‘ಏ ಇಕಿನ’,'ಜಲ್ದಿ ಬಾರ ಇಲ್ಲಿ’,'ಕೇಳಿಸ್ತೇನ ಹೇಳಿದ್ದು?’ ಇಂಥಹದೆ ಸಂಭೋಧನೆಗಳು ಹೆಂಡತಿಗೆ. ‘ನನ್ನ ರಾಣಿ’,'ಮೆಹಬೂಬಾ’,'ಸ್ವೀಟಿ’ ಅನ್ನುವ ಶಬ್ದ ಕೇಳಿದ ಹೆಂಡದ್ರ ಇರಲಿಕ್ಕಿಲ್ಲ. ಒಂದೇ ಸಂಡಾಸು, ಸ್ನಾನದ ಮನೆಯ ಕಾಲವದು. ಇಂಥಾದರಲ್ಲಿ ಗಂಡ ಎನ್ನುವವ ಹೆಂಡತಿಗೆ ತನ್ನ ಇರಾದೆ, ಇಚ್ಚೆ ತೋರಿಸುವದದೆಂತು? ಬಯಕೆ ಅಭಿವ್ಯಕ್ತಿಸುವ ದಾರಿ ಯಾವದು? ಈ ಹಿನ್ನೇಲೆಯಲ್ಲಿ ಕವಿತೆಯನ್ನು ಅವಲೋಕಿಸಬಹುದು.

ನಿನಗಾಗಿ ಓಡೋಡಿ ಬಂದೆ ನಾನು , ಕಾಣದೆ ಮರೆಯಾಗಿ ಹೋಗಲಿಲ್ಲವಾದರೂ ನೀನು, ನನಗೆ ಬೇಕಾದದ್ದನ್ನೆನೂ ಕೊಡದೆ ಬರೀ ಮುಗಳು ನಗೆಯಿಂದ ನನ್ನ ಸಾಗ ಹಾಕುವೆ ಯಾಕೆ? ಎನ್ನುವ ಆಪಾದನೆ ಹೊತ್ತೆ ಬಂದ ನಲ್ಲ. ಆರಾಮಾಗಿ ಸೋಫಾದ ಮೇಲೆ ಕೂತು ಸೋಪ ಒಪೇರಾ ನೋಡುತ್ತ, ಚೆಲುವ ನೋಟ ಹೀರುತ್ತ, ಮುಂಗರಳ ಮೀಟುತ್ತ ‘ಅಯ್ಯೋ, ಈ ದಿನ ಹೀಗಾಯಿತು ‘ಎಂದಾಗ ನಲ್ಲೆ ಕೂದಲಲ್ಲಿ ಕೈ ಆಡಿಸುತ್ತ ‘ಹೌದಾ, ನನ್ನ ರಾಜಾ- ಬಾ ಇವತ್ತು ಸ್ಟಾರಬಕ್ಸಗೆ ಹೋಗಿ ತಾಝೊ ಚಾಯಿ ಕುಡಿಯುತ್ತ ಮಾತನಾಡೋಣ’ ಎನ್ನುತ್ತಾಳಾ? ಇಲ್ಲಾ – ಅವಳೂ ಮಹಾರಸಿಕಳೆ ಆದರೂ ಕಟ್ಟುಪಾಡು ದಾಟಲಾರಳು. ಕೆಣಕದೆ ಇರಲಾರಳು.

‘ಆಯಿತು, ನನಗೇನೋ ಇಪ್ಪತ್ತೆಂಟು ಆದ್ಯತೆ-ಬಾಧ್ಯತೆಗಳು. ನಿನ್ನ ಚಾಲಾಕಿತನ ಎಲ್ಲಿ ಹೋಯಿತು? ದೊಡ್ದದಾಗಿ ಏನೋ ಕೊಟ್ಟು, ತೊಗೊಂಡು ಹೋಗುವವನಂತೆ ಕುಣ ಕುಣಕೊಂಡು ಬಂದಿ -ಮುಂದ ಹರಿಲಿಕ್ಕಾಗಲಾರದ ಮಣಕೊಂಡು ಕುಂತಿ. ಇದೇನು ಹೊಸಾದಲ್ಲ ಬಿಡು. ಇನ್ನೊಂದ ಐದು ನಿಮಿಷ ಕೂಡು -ಚಾ ಮಾಡಿ ಕೊಡ್ತಿನಿ, ಕುಡದು ಮುಂದಿನ ಕೆಲಸ ನೋಡು’ -ಎನ್ನುವಂಥ ಕಿಲಾಡಿ ಉತ್ತರದ ಹೆಣ್ಣು.

ಅಷ್ಟಕ್ಕೆ ಬಿಟ್ಟು ಬಿಡುವವನು ಅದೆಂಥ ನಲ್ಲ? ‘ಆತು ಬಿಡು, ಮಾತಿನಾಗಂತೂ ನೀ ಏನ ವ್ಯಕ್ತ ಮಾಡು ಹಂಗ ಕಾಣಸಂಗಿಲ್ಲ -ಆ ಧವಳ, ಕವಳ ಕಾಂತಿಯ, ಹೊಳೆ ಹೊಳೆವ ಕಣ್ಣ ಒಡತಿ ನೀನು, ಕಡೀಕ ಅಲ್ಲೇ ಆ ಕಣ್ಣಾಗರ ಕಳದ ಹೋಗು ಹಂಗ ಮಾಡು ಅಂದ್ರ ಅದಕ್ಕೂ ಕಲ್ಲ ಹಾಕು ಹಂಗ ಕಾಣಸ್ಲಿಖತ್ತದಲಾ’. ಎಲ್ಲಾ ದಿವಸದಂಗ ಇವತ್ತೂ ಚಾ ಕುಡದು, ಚುನಮುರಿ ತಿಂದು ಒಂಚೂರ ಟಿ,ವಿ, ನೋಡಿ ವ್ಯಾಳ್ಯಾ ಹಾಳಮಾಡಲಿಕ್ಕೆ ಒಲ್ಯಾಗ್ಯದ ಅಂಬುದು ನಿನಗ ಹೆಂಗ ತಿಳಿಸಬೇಕು?

ನಲ್ಲೆ ಏನೂ ಕಮ್ಮಿ ಇಲ್ಲಾ -ಇಂಥಾ ಮಾತಿಗೆ. ‘ಸಿಟ್ಟ್ಯಾಕೋ, ಸಿಡುಕ್ಯಾಕೋ ನನ ಜಾಣ?’ ಬರೀ ಇದ ಚಾಟೂಕ್ತಿ ಮಾಡ್ಕೋತ ಇದ್ರ ಮನಿ ಚಾಕರಿ ಮಾಡೋರ್ಯಾರು? ‘ಸ್ವಲ್ಪ ಆ ಸ್ಟೈಲನ್ಯಾಗ ಸಿಡುಕಿದಂತೆ ಮುಖ ಮಾಡುದ ನೋಡಿದ್ರ, ಕನ್ಯಾ ನೋಡ್ಲಿಕ್ಕೆ ಬಂದಾಗ ಗುಮ್ಮನ ಗುಸಕಿನಂಗ , ಒಣಾ ಗಾಂಭಿರ್ಯದಿಂದ ಕೂತದ್ದ ನೆನಪಾಗ್ತದ ನೋಡು’

ಏನ ಹೇಳಬೇಕೋ, ಆದ್ರೂ ಏನೋ ಒಂದು ಎಳೆ ಸಿಕ್ಕಂಗಾತು -ಇದೂ ನಡೀತದ ತೋಗೊ ನಗೆಚಾಟಿಕೆಗೆ ಅನಸ್ತದ ನಲ್ಲಗ. ‘ಎಷ್ಟ ಛೊಲೊ ಅರ್ಥ ಮಾಡ್ಕೊಂಡಿ ಅಲ್ಲೆ ನನ್ನ- ಹೂಂ ಅನಕೋತ ಮರೆ ಮಾಚಬಲ್ಲಿ – ಮುರಳಿಯ ಮರಸಿ ನಟಿಸಿ ನಗಿಸುವ ಸರಸಿ ಹಂಗ. ಹೂಂ,ಹೂಂ ಅನಕೋತ, ನಾಚಗೋತ ನನ್ನ ಮನವನ್ನೆಲ್ಲಾ ಆವರಿಸಲು ಬಲ್ಲಿ’

ಮಾತಿಗಿಗೊಂದು ತಿರುವು ಸಿಕ್ಕಂಗ ಆತು ಈಗ, ನಲ್ಲೆಗೀಗ ಮತ್ತಿಷ್ಟು ಹುರುಪು. ಇಷ್ಟೊತ್ತಿಂದು ಆಲತು-ಫಾಲತು ಮಾತಿತ್ತೇನೋ. ಈಗ ಮನಸ್ನ್ಯಾಗಿಂದು ಹೇಳ್ತಿನಿ ಕೇಳು. ನಿನ್ನ ಮಾತಂದ್ರ ರಾಗ ನನಗ. ನಿನ್ನ ಜೊತೆಗಿನ ಝೇಂಕಾರ ಒಂದಿದ್ರ ಸಾಕು ಸರಸ-ವಿರಸ ಎಲ್ಲಕ್ಕೂ ಸೈ ನಾನು, ನನ್ನೊಳಗ ನಿನ್ನ ನಶೆಯೋ, ನಿನ್ನ ನಶೆಯೊಳಗ ನಾನೋ? ಈ ಮತ್ತನ್ಯಾಗ ನಾ ಯಾವಾಗ್ಲೂ ಇರಲಿ ಬಿಡು.

ಆಹಾ -ಹುರಪಿಗೆದ್ದ ಹುಡಗಿ ಮುಂದ ಈ ಪ್ರಪಂಚದಾಗ ಬ್ಯಾರೆದೆಲ್ಲಾ ಸಪ್ಪೆ. ಆದರೂ ಇಲ್ಲಿಗೆ ಎಲ್ಲಾ ಮುಗಸಿದ್ರ ಏನ ಸಾಧಿಸಿದಂಗಾತು? ಇನ್ನೂ ಸ್ವಲ್ಪ ಜಗ್ಯಾಡಬೇಕು-ಕೆಣಕಬೇಕು -ಆವಾಗ್ಲೆನೆ ಅದರ ಮಜಾ. ‘ಅದೆಲ್ಲಾ ಸರಿಯೆ, ಹೂ ಎಷ್ಟೇ ಸುಂದರ ಆದ್ರೂ ಜೀವನ ಪೂರಾ ನಮ್ಮ ತೆಕ್ಕೆ ಒಳಗ ಇಟ್ಗೊಂಡು ಇರ್ಲಿಕ್ಕಾಂಗಿಲ್ಲ. ಒಂದೇ ಶೃತಿ ಆಗಲಿಕ್ಕೆ, ವೈವಿಧ್ಯಕ್ಕ ಮತ್ತೆನೋ, ತೃಪ್ತಿಯಾಗೋದು ಬೇಕಲ್ಲ ಜೀವನದಾಗ’ ನಲ್ಲನಿಗಿನ್ನೂ ಸ್ವಲ್ಪ ಬೇಕು -ಏನೋ ಒಂದು.

ಇಡೀ ಕಾವ್ಯದ ಧಾಟಿ , ಆ ಚೆಲ್ಲುತನದ ಜೀವಾಳ ನಲ್ಲೆಗೆ ಗೊತ್ತು. ಬರಿ ಗಾಳಿ ಬೀಸಿದಂತೆ ಹೋಗುವದಕ್ಕೂ, ಗಾಳಿಯನ್ನೆ ಜೀವಾಳವಾಗಿಸಿಕೊಳ್ಳುವದಕ್ಕೂ ವ್ಯತ್ಯಾಸವಿಲ್ಲವೆ? ಅಂಥಾ ಪರಮ ಮೂಲ, ಉತೃಷ್ಟ, ಉತ್ಕ್ರಾಂತಿ ಸಿಗುತಿರುವಾಗ ಬೇರೆಯದೆಲ್ಲಾ ಏನೂ ಹುರುಳಿಲ್ಲದ ಪೊಳ್ಳು. ನಲ್ಲನ ಬಣ್ಣದ ಥಳಕು ಬಳಕು ಮಾತಿಗಿಂತ ಆತನ ನಳನಳಿಸುವ ಜೀವನ ಪ್ರೀತಿ ಬೇಕು ನಲ್ಲೆಗೆ. ಈ ಮಾಂಗಲ್ಯಕ್ಕಿಂತ, ಮಿಲನಕ್ಕಿಂತ ಮಿಗಿಲಾದುದು ಏನಾದರು ಉಂಟೆ? ಪ್ರೇಮದ ಸ್ವರೂಪವೆಂದರೆ ಯಾವತ್ತಿಗೂ ಅಸ್ಪಸ್ಟವೆ, ಸಂಪೂರ್ಣ ಅರಿವಿಗೆ ನಿಲುಕದ್ದೆ -ಹಾಗೆಯೆ ಇರಬೇಕಾದದ್ದು ಕೂಡಾ.
ಹಿಗ್ಗು ಶಬ್ದವನ್ನು ಬೇಂದ್ರೆ ಅರಳಿಸಿದಂತೆ ಪ್ರಾಯಶ ಬೇರೆ ಯಾರೂ ಉಬ್ಬಿಸಿರಲಾರರು. ಒಂದೆರಡು ಉದಾಹರಣೆ ಕೊಡುವುದಾದರೆ “ಹಿಗ್ಗ ಬೀರಿ ಹಿಗ್ಗಲಿತ್ತು”, “ಹಿಗ್ಗು ಸುಖದುಃಖಗಳ ಸುಲಿದ ತಿಳಲು”. ಎಲ್ಲೆಯಿಲ್ಲದ ಜೀವನ ಶ್ರದ್ಧೆಯನ್ನು, ಜೀವಂತ ಪ್ರೀತಿಯನ್ನು ಎರಕ ಹೊಯ್ದಂತಿದೆ ಈ ಅಪ್ರತಿಮ ಕವಿತೆ.

Tuesday, May 20, 2014

ಹೆಣ್ಣು

ನೀನೆನಗೆ ನಾನಿನಗೆ ಒಲಿದಾಘಳಿಗೆ
ಕೆಳಬಾಗಿದ ನಿನ್ನ ಕಂಗಳಾಹ್ವಾನ
ನಡುಗುವಾ ಅಧರಗಳೇ ಆದವಾಧಾರ
ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ
ನಿನ್ನ ಒದ್ದೆ ತುಟಿಗಳ ನಾ ಕದ್ದೆ
ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ
‘ಇದು ಸ್ವರ್ಗ ನೀ ಸರಸಿ
ಅರಸಿ ಬಂದಿಹ ನಾ ರಸಿಕ’
ಮಾತು ನನ್ನದು -ಜಾಣೆ ನೀ ಮೌನಿ
ಧ್ಯಾನದ ಧನ್ಯತೆ ನಿನ್ನದು
ಅಬ್ಬರದ ಮಂತ್ರದಾರ್ಭಟ ನನ್ನದು.

 

ಹಚ್ಚ ಹಸಿರಿನ ಪಚ್ಚ ಪೈರಿನ ಬಳುಕು
ತುಳುಕಿಸಲು ನಾನೋಡಿದ ಪರಿಗೆ
ನಿನ್ನುತ್ತರವದೇ ಮಂದಹಾಸ
ಪಡೆಯುವದಕ್ಕಿಂತ ಕೊಡುವದರ ಮಹತ್ತು
ಹತ್ತತ್ತು ಸಾರಿ ನೀ ತೋರಿದೆ ಮತ್ತೆ ಮತ್ತೆ
ಕೊಳ್ಳುವದರಲ್ಲೇ ನಾ ಕಾಲ ಕಳೆದೆ
ಕೊಡುತ ಬಾಳುವದ ಕಲಿಬೇಕು ನೋಡಿನ್ನು
ಮನೆ,ಮಹಲು ಬೇಡೆಂದೆ ನೆಮ್ಮದಿ ಮನ ಬೇಕೆಂದೆ
ಮಗುವಾಗಿಸಿ ಮಡಿಲಲ್ಲಿ ತಟ್ಟಿ ಮಲಗಿಸಿದೆ
ಬಿದ್ದಾಗ ತಬ್ಬಿ ಎತ್ತಿ ಎಚ್ಚರಿಸಿದೆ
ಕವಿಯ ಕವಿತೆ ನೀನು ದೀಪದ ಹಣತೆ.

ಅರಿವಾಗದ್ದೆ ಹೆಣ್ಣೆನೋ, ಮಣ್ಣಿನ ಕಣ್ಣೆನೋ
ನೆಲ,ನದಿಯ ಸಂತಾನ ನೀನು
ನಿರಂತರ ನೀಡುವ ನಿಲುವಿನವಳು
ಛಲವ ಚೆಲುವಾಗಿಸಿ ಒರಟನಲ್ಲಿ ಒಲವಿಳಿಸಿ
ನನ್ನ ಬರಡು ಕೊರಳ ಕೊಳಲಾಗಿಸಿದವಳು
ನೋವನುಂಗಿ ಹೊತ್ತು ಹೆತ್ತು
ಭೂಮಿ ಬಗಿದು ಹೊಸತ ಚಿಗಿಸಿ
ಬಾಳನಿತ್ತು ಅನಿತು ಸುಖವ ಬಡಿಸಿದವಳು
ನಿನ್ನ ನೆನೆವವರ ಮನೆಯ ಬಿಟ್ಟು
ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು
ಬಿಟ್ಟ ಮನೆಗೆ ಅಟ್ಟ ಕಟ್ಟಿ ಬದುಕು ಉಟ್ಟವಳು.


ಬನ್ನಣೆಗೆ ಸಿಗದ ಹೊಗಳಿಕೆಗೆ ಹಿಗ್ಗದ
ಮಲ್ಲಿಗೆಯ ಮೊಗ್ಗಿನ ಸುಗಂಧ
ಮೊಗೆದಷ್ಟೂ ಸಿಗುವ ಅಗಿದಷ್ಟೂ ಅಳಿಯದ
ರಾತ್ರಿಯ ನೀರವತೆಯಲ್ಲಿ ಬೆಳಗಿನ ನಿರೀಕ್ಷೆ
ಕತ್ತಲೆಯ ಕದದೂಡಿ ಕಾಂತಿಯಂತೆ ನಿಂತಿ
ಜ್ಞಾನದ ಕೂರ್ಜಾಣ್ಮೆ ನಿರ್ಮಲಾಂತರಂಗ
ಶ್ರೇಷ್ಠತೆಯ ವ್ಯಸನವಿಲ್ಲದ ಒಳತಿನ ಮಿತಿ
ನಗುವರಳಿಸಿ ನಕ್ಕರೆ ನಭಕೆ ಚೆಲ್ಲಿದ ಸಕ್ಕರೆ
ಹೆಣ್ಣಿಲ್ಲದ ಜಗ ಭಣ ಭಣ ಮರವಿಲ್ಲದರಣ್ಯ
ಕಣ ಕಣದಲಿ ತುಂಬಿದ ಅಂತಃಕರಣ
ನೀ ಬಳಲಿದಂದೇ ಮನುಜರ ಮರಣ.

ಹೆಣ್ಣು 

ದೇವನೊಲಿದ

ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.

-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God'  ಪದ್ಯದ ಭಾವಾನುವಾದ)


ದೇವನೊಲಿದ 

Wednesday, April 16, 2014

ಕಬಳಿಸೋ ಮಗನ ಕಬಳಿಸು

                ಕಬಳಿಸೋ ಮಗನ ಕಬಳಿಸು

ಹೂ, ಗಿಡ, ಹಣ್ಣು, ಹಕ್ಕಿಯಿಂದ ಕಲಿಲಿಕ್ಕೆ ಸಾಧ್ಯ ಇಲ್ಲಾ
ಅದ ಅಂತ ಹೇಳಿದವರ ಬಾಯಿ ಮೊದಲ ಹೊಲಿ.
ಮುಗಿಲು,ಮೋಡ,ಚಂದ್ರ,ಸೂರ್ಯ ಇವೆಲ್ಲಾ
ನಾಲಾಯಕ್ಕ ಅವತರ ಗೂಡಾ ನಡಿಬ್ಯಾಡ-ಫಾಯ್ದಾ ಇಲ್ಲಾ.
ನದಿಯಂತ, ಮೇಘಚುಂಬಿ,ಗುಡಿ,ಗುಂಡಾರಂತ ಎಲ್ಲಾ ಸುಳ್ಳು
ಆತ್ಮ, ಮೋಕ್ಷ, ನರಕ, ಸ್ವರ್ಗ ಎಲ್ಲಾ ಪೂರಾಕೆಪೂರಾ ಮೇಡಪ್ಪು.
ಇರಬಿ ನೋಡಿ ಕೆಲಸ ಕಲಿಲಿಕ್ಕಾಂಗಗಿಲ್ಲಾ.
ಗಡಿಯಾರಾ ನೋಡಿ ಬದಕು ನಿಖರಾಗಂಗಿಲ್ಲಾ.
ಅದು ಇದು ಅವರಿವರು ಬರೆದಿದ್ದು ಓದಿ
ಸಾಧನಿ ಮಾಡುದು ಅಶಕ್ಯ ಐತಿ ತಿಳ್ಕೊ ಮಗನ.

ನಮ್ದು ಮಿಡ್ಲ ಕ್ಲಾಸು -ಯಾವಾಗ್ಲೂ ಖಾಲಿ ಅರ್ಧಾ ಗ್ಲಾಸು.
ಅವುಡಗಚ್ಚಿ ಓದು ಮಗನ – ಅದ ನಿನ್ನ ರಹದಾರಿ
ಇನ್ನೊಂದು ದಾರಿ ಯಾರು ತೋರಿಸಿಲ್ಲಾ ಇನ್ನೂನು.
ಹೊಡಿ,ಬಡಿ,ರಕ್ತಾ ಸುರಿಸ್ಲಾರ್ದ ಏನಾದರೂ ಮಾಡ್ಲಿಕ್ಕಾದ್ರ
ಮಾಡು-ಡೌಟೈತಿ ನನಗೇನೋ, ಆದ್ರೂ ಒಂದ್ಸಾರಿ ನೋಡು.
ಹೆಂಗರ ಮಾಡಿ ಮ್ಯಾಲೆ ಬರಬೇಕು ಮಗನ.
ಮರಿಬ್ಯಾಡ ನ್ಯೂಟನನ ಕಥಿ
ಎಷ್ಟು ತುಳಿತಿಯೋ ಅಷ್ಟು ಪುಟಿತಿ.
ಎಲ್ಲಾರ ಅಂಡಿಗೆ ಕಟ್ಟಿ ಐರನ್ ಉಂಡಿ
ನೀ ಮಡಿಕೋ ನಿನ್ನದೊಂದೆ ಧುಮಕು ಕೊಡಿ.

ಕಂಡದ್ದು ತಿನ್ನು, ಸಿಕ್ಕದ್ದು ಕುಡಿ-ಸಿಕ್ಕವರ ಜೋಡಿ
ಫಸ್ಟ ಮುವತ್ತರಾಗ ರಿಚ್ಚೆಸ್ಟ ಲಿಸ್ಟನ್ಯಾಗ ಹೆಸರ ಜಡಿ.
ನೆಕ್ಷ್ಟ ಮುವತ್ತರಾಗ ನೀ ಕುಂಡಿ ಊರಿದ್ದು, ನಿಂತದ್ದು
ಎದ್ದದ್ದು, ಮಲಗಿದ್ದು ಆಗಬೇಕು – ಸುದ್ದಿಯೋ ಸುದ್ದಿ.
ಹುಚ್ಚೆದ್ದು ಮುಗಿ ಮುಗಿದು ಬೀಳಬೇಕು ಪರಪಂಚದ
ಮೂಲೆ ಮೂಲೆ ಮಂದಿ, ನೀ ತಗದರ ಬಾಯಿ -
ಟಕ ಟಕಾ ತಗಿಬೇಕು ಬಿಲಿಯನ ಕಿವಿ.
ಎತ್ತಿದರ ನೀ ನಿಂದೊಂದು ಬಟ್ಟೂ
ಕೋಟಿ ಜನ ನಿಲ್ಲಬೇಕು ಬಿಟಗೊಂಡು ಬಟ್ಟು.
ಆಗ್ಬೇಕು ನಡದದ್ದ ಹಾದಿ – ಬಂಗಾರ ನಿನ್ನ ಲದ್ದಿ.

ಮುಂದಿನ ಮುವತ್ತು ಕುಂತಿ ಹಂಗ, ಖಬರಗೇಡಿ,
ಅಪ್ಪಾ, ಅವ್ವಾ, ಬಂಧು, ಹೇಣತಿ-ಮಕ್ಕಳ ಮರಿ.
ಜಗತ್ತಿನ್ಯಾಗ ಏನೆನೈತಿ ಅದರ್ಮ್ಯಾಗ ನಿನ್ನ ಹಕ್ಕೈತಿ
ಕಬಳಿಸು ಏನೂ ಉಳಿಸದಂಗ-ನಿರಂಕುಶಮತಿಯಾಗು.
ಸ್ವಂತೊದ್ಧಾರ ಆಗಿರಲಿ ನಿನ್ನ ಮಂತ್ರೊದ್ಧಾರ
ಢರಕಿ ಬರ್ಲಿ ಹಂ ಅಹಂ ಅಂತ ಢುಸಕಿ ಹೊಡ್ದೊಡದು.
ಹಾರ್ಟನ್ಯಾಗಿಲ್ಲ ಭಾವಾ, ಮೆದುಳಾಗಿಲ್ಲ ಮೋಹಾ -
ಇರ್ಬೇಕು ಜಿಟ್ಟೀಯ ಹುಳದಂಗ-ತಿನ್ಕೋತ ಸುತ್ತಲಿಂದು
ಏನಾರ ಉಳಿಸಿದ್ಯಾದ್ರ ನೋಡು ನನ್ಮ್ಯಾಲಾಣಿ
ನೀ ಹೋಗುಕ್ಮೊದ್ಲು ಹೋಗೀರ್ಬೇಕು ಹ್ಯೂಮ್ಯಾನಿಟಿ.

'ಅವಧಿ' ಯಲ್ಲಿ ಪ್ರಕಟಿತ --
http://avadhimag.com/2014/04/16/%E0%B2%A8%E0%B2%AE%E0%B3%8D%E0%B2%A6%E0%B3%81-%E0%B2%AE%E0%B2%BF%E0%B2%A1%E0%B3%8D%E0%B2%B2-%E0%B2%95%E0%B3%8D%E0%B2%B2%E0%B2%BE%E0%B2%B8%E0%B3%81-%E0%B2%AF%E0%B2%BE%E0%B2%B5%E0%B2%BE%E0%B2%97/


Monday, March 17, 2014

ಕಂಭಕ್ಕಾತು ನಿಲ್ಲುವದಿಲ್ಲ

ಕಂಭಕ್ಕಾತು ನಿಲ್ಲುವದಿಲ್ಲ

ಅನಿಲ ತಾಳಿಕೋಟಿ

ಮೊದಲಾದರೆ ನೀ ಬರುವ
ಪರಿಮಳವದೆಂತೋ ಪತ್ತೆ ಹಚ್ಚಿ
ಇದ್ದೊಂದ ಪೌಂಡ್ಸ ಪೌಡರನ
ಒಂದೆರಡು ಗ್ರಾಂಗಳ ಮೆತ್ತಿ
ನಗುವರಳಿಸಿ ನಾ ಕಾಯುತ್ತಿದ್ದೆ.

ಕಾಯದ ಪ್ರಭಾವವೋ ಗಾಯದ್ದೋ
ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ
ಕಮ್ಮಿಯಾಗಿರುವದು ಕಂಭಗಳೇನಲ್ಲ
ಎನ್ನುವದ ನೀ ಅರಿಯದವಳೇನಲ್ಲ
ಸಂಧಿಗೊಂದಿಗಳಲ್ಲಿ ಆಕಸ್ಮಿಕವಾಗಿ
ಸಂದಿಸುತ್ತಿದ್ದದ್ದು ನಿನಗೂತ್ತೆಂಬುವದು ನನಗೊತ್ತು.

ಕಳ್ಳ ಬೆಕ್ಕು ನಿನ್ನ ಕುಡಿನೋಟಕ್ಕೆ ಸೊಕ್ಕು
ಬೀದಿ ನಾಯಿಯಾಗಿ ಸುತ್ತಿದ್ದು
ಛಪ್ಪನ್ನಾರು ಊರುಗಳಿಗೆಲ್ಲ ಗೊತ್ತು
ಮಜವಿತ್ತು, ಮುದವಿತ್ತು ಹೂರಿ
ನೋಟಗಳ ಹೊಯ್ದಾಟ ಚೆಲುವಾಗಿತ್ತು
ತಂಗಾಳಿ ಕೂಟ ನಮ್ಮೂಟ
ಮಟ ಮಟ ಮಧ್ಯಾಹ್ನಗಳ ಮಸ್ತಾಗಿಸುತ್ತಿತ್ತು.

ಆ ತಿರುವುಗಳು ಮರೆಯಾಗಿವೆ
ನಿನ್ನ ಕರುಳಬಳ್ಳಿಗಳ ದಿಕ್ಕು ಬದಲಾಗಿವೆ
ಮರೆಯೆಂದರೆ ಮರೆಯಲ್ಹೆಂಗೆ
ಮೇರೆಯಿಲ್ಲದ ನುಗ್ಗಿ ಬರುವ ತೊರೆ
ನೆರೆ ಮುಗಿದಾದ ಮೇಲೆ ಬರೀ ನೊರೆ
ನಾರಿ ನಾರೀ ನೀನಾರೇ ನಾರೀ ನಾರೀ
ಎನದಿರು ಸೋ ಸ್ವಾರಿ ಸ್ವಾರೀ ರೀ ಸ್ವಾರೀ
ಮಾಗಿ ಮೆರೆಯುತ್ತಿದ್ದಿದ್ದೆಲ್ಲಾ
ಬಾಗಿ ಬೆಂದು ಮರೆಯಾಗಿವೆ
ಪರಿಚಿತ ದಾರಿಯಲ್ಲಿ ಅಪರಿಚಿತರ
ಪಾತ್ರ ಪ್ರಪಂಚ ಮುಂದುವರಿಯುತ್ತಿದೆ.

ಕಂಭಕ್ಕಾತು ನಿಲ್ಲುವದಿಲ್ಲ 

ಸಮಾನತೆಗಾಗಿ

        ಸಮಾನತೆಗಾಗಿ
ರಾಮಕೃಷ್ಣ ಗರ್ಭದ ಕಲ್ಲಾದ
ಬುದ್ದ ಬಸವಳಿದು ಬಿದ್ದ
ಅಲ್ಲಮ ಮೆಲ್ಲನೆದ್ದು ಹೋದ
ಮೋಹನದಾಸನಾಶಿಸುತ್ತ ಅಸುನೀಗಿದ
ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ
ಮಳೆ ಸುರಿಯಿತು ಮರುಭೂಮಿಯ ಮೇಲೆ
ಕೊಳೆ ಬೆಳೆಯಿತು ಮನುಜರರಿವಿನೊಳಗೆ
ಬರಬೇಕಾದವರೆಲ್ಲಾ ಬಂದು ಹೋದರು
ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು
ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು.
ನ ಹನ್ಯತೆ ಅಸಮಾನತೆ
ಕೊಲ್ಲಬಂದವರೆಲ್ಲಾ ಕಾಲವಾದರೂ
ಕಾಲೂರಿಕೊಂಡ ಕೊಳೆತದ ನಾತ
ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ
ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ
ಮನೆ ಮನೆಗಳಲ್ಲಿ ಮುದುಡಿದ ಮನಗಳು
ತೆರೆ ತೆರೆದ ಕಿಂಡಿಗಳಿಂದ ಹೊರ ಹೊರಡಲಿ
ಕುಲ ಕುಲವೆನ್ನುವ ಕಾರಿರುಳು
ಒಳ ಹರಡಲಿ ಕಾಂತಿಯ ಸುಡುನೆರಳು
ಸಹಜಾತಿ ಸುಖಕಿಂತ ಮಿಗಿಲು ಮಾನವೀಯತೆ
ಮೂರನೂರು ಉಂಡ ಹೊಟ್ಟೆಗಳ
ತಣಿಸುವದಕ್ಕಿಂತ ಮಿಗಿಲು
ಮೂರು ದಣಿದ ಮೈಗಳಿಗೆ
ಸಂತೈಸುವೆರೆಡು ಕೈಗಳು
ಸಾವಿರ ಪುಟಗಳ ಸಮೃದ್ಧ
ಸಮಾನತೆಯ ಸಾಹಿತ್ಯಕ್ಕಿಂತವಧಿಕ
ಒಬ್ಬ ಬಡವನ ಕಣಿವೆಯೊಡಲಲ್ಲಿ
ಬೆಳೆ ನಳಿನಳಿಸುವದು
ಬವಣೆಯ ಕಳೆ ಕೀಳುವದು
ಬನ್ನಿ ಜಗದೊಧ್ಧಾರಕರ ಅನಗತ್ಯವಾಗಿಸುವ.

 ಸಮಾನತೆಗಾಗಿ