Monday, March 17, 2014

ಸಮಾನತೆಗಾಗಿ

        ಸಮಾನತೆಗಾಗಿ
ರಾಮಕೃಷ್ಣ ಗರ್ಭದ ಕಲ್ಲಾದ
ಬುದ್ದ ಬಸವಳಿದು ಬಿದ್ದ
ಅಲ್ಲಮ ಮೆಲ್ಲನೆದ್ದು ಹೋದ
ಮೋಹನದಾಸನಾಶಿಸುತ್ತ ಅಸುನೀಗಿದ
ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ
ಮಳೆ ಸುರಿಯಿತು ಮರುಭೂಮಿಯ ಮೇಲೆ
ಕೊಳೆ ಬೆಳೆಯಿತು ಮನುಜರರಿವಿನೊಳಗೆ
ಬರಬೇಕಾದವರೆಲ್ಲಾ ಬಂದು ಹೋದರು
ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು
ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು.
ನ ಹನ್ಯತೆ ಅಸಮಾನತೆ
ಕೊಲ್ಲಬಂದವರೆಲ್ಲಾ ಕಾಲವಾದರೂ
ಕಾಲೂರಿಕೊಂಡ ಕೊಳೆತದ ನಾತ
ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ
ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ
ಮನೆ ಮನೆಗಳಲ್ಲಿ ಮುದುಡಿದ ಮನಗಳು
ತೆರೆ ತೆರೆದ ಕಿಂಡಿಗಳಿಂದ ಹೊರ ಹೊರಡಲಿ
ಕುಲ ಕುಲವೆನ್ನುವ ಕಾರಿರುಳು
ಒಳ ಹರಡಲಿ ಕಾಂತಿಯ ಸುಡುನೆರಳು
ಸಹಜಾತಿ ಸುಖಕಿಂತ ಮಿಗಿಲು ಮಾನವೀಯತೆ
ಮೂರನೂರು ಉಂಡ ಹೊಟ್ಟೆಗಳ
ತಣಿಸುವದಕ್ಕಿಂತ ಮಿಗಿಲು
ಮೂರು ದಣಿದ ಮೈಗಳಿಗೆ
ಸಂತೈಸುವೆರೆಡು ಕೈಗಳು
ಸಾವಿರ ಪುಟಗಳ ಸಮೃದ್ಧ
ಸಮಾನತೆಯ ಸಾಹಿತ್ಯಕ್ಕಿಂತವಧಿಕ
ಒಬ್ಬ ಬಡವನ ಕಣಿವೆಯೊಡಲಲ್ಲಿ
ಬೆಳೆ ನಳಿನಳಿಸುವದು
ಬವಣೆಯ ಕಳೆ ಕೀಳುವದು
ಬನ್ನಿ ಜಗದೊಧ್ಧಾರಕರ ಅನಗತ್ಯವಾಗಿಸುವ.

 ಸಮಾನತೆಗಾಗಿ

2 comments:

sunaath said...

ನಿಮ್ಮ ಮನದಾಳದಿಂದ ಹೊರಬಂದ ಈ ಕವನರೂಪದ ಆಹ್ವಾನಕ್ಕೆ ನನ್ನ ಮನಸ್ಸು ಸ್ಪಂದಿಸುತ್ತಿದೆ. ಸಮಾನತೆ, ಮಾನವೀಯತೆ ಎಲ್ಲೆಲ್ಲೂ ಸೊಗಸಲಿ.

Unknown said...

Sunaath Kaka
Thanks
-Anil