ಹೃದಯ ಬಟ್ಟಲಲ್ಲಿ ಅವರೆ
ಕೇಳಿದಾಕ್ಷಣ, ಕಬ್ಬಿಣದ ಸರಳೊಂದ
ನಿಗಿನಿಗಿಸಿ ಮಲಗಿಸಿದೆ ನನ್ನೆದೆಯ ಮೇಲೆ
ಸಿಡಿದು ಚೂರಾಗಿ ಸಿಗಿದು ಸುಟ್ಟು ಕರಕಲಾಯ್ತು.
ಮಾತೆ, ತಾಯಿ ಕಣ್ ಬಿಟ್ಟಳು, ಮಳೆ ಸುರಿಸಿದಳು
ನನ್ಮೇಲೆ ಕೊಡೆಯಿಟ್ಟು ಸರಿದು ನಿಂತೆ ನೀ ನಸುನಗುತ
ಅಳಿದುಳಿದ ಹೃದಯದ ಚೂರು-ಪಾರು ನಾನೀಗ.
ಕಣ್ಣಕಣ್ಣಲಿಟ್ಟು ಕೈ ಕೈ ಹಿಡಿದು ಆಡಿದ ದಿನಗಳೆಷ್ಟೋ?
ಇಡಲುಂಟೆ ಲೆಖ್ಖ, ಹುಟ್ಟಿದಾರಭ್ಯ ನನಗಂಟಿದ ನಂಟ?
ನೆನಪಿದೆಯೆ ಆ ದಿನ, ಗಿರಿ ಗಿರಿ ಸುತ್ತುತ್ತಿದ್ದ
ಗಾಲಿಯಚ್ಚಿನಲಿ ಸಿಲುಕಿ ನಲುಗಿದ ನಿನ್ನ ಕೋಮಲ ಪಾದ
ಮಧ್ಯ ಬೀದಿಯಲಿ ವಿಹ್ವಲವಾಗಿ ಕಿರುಚಿದ್ದು ನೀನಾ, ನಾನಾ?
ವಾರಗಟ್ಟಲೆ ಹಚ್ಚಿ ಮಲಾಮ ನಾನಾಗಿದ್ದೆ ನಿನ್ನ ಗುಲಾಮ.

ಪುಟ್ಟ ಕೈಯಲ್ಲಿ ಎಲ್ಲಾ ಮುಚ್ಚಿಟ್ಟು ನೀ ಮಾಡಿದೆ ರಟ್ಟು ಗುಟ್ಟು.
ಓದಿದ್ದು ಪುಸ್ತಕದ ಹೊದಿಕೆ ಮಾತ್ರ ಒಳಗಿನದೆಲ್ಲಾ
ನನಗರಿವಾಗದ, ಅರ್ಥೈಸಲಾಗದ ಭಾಷೆಯ ಪ್ರಭಾವ.
ಪ್ರಭಾವಳಿಯಲ್ಲಿ ನಾ ಸುತ್ತುತ್ತಿರುವೆ ಸತ್ತಂತೆ
ಮನಸೆಲ್ಲಾ ಕೇಂದ್ರಾಭಿಗಾಮಿಯಾಗಿ ಅಂದಿನಿಂದ.
ಸುಡು ಸುಡು ನೆತ್ತಿಯ ಸೂರ್ಯ
ಬೆವರೊರಿಸಿ ನಾ ಸೇರಿದೆ ನಿನ್ನ ಗೂಡ.
ತಂಪು ತಂಪಾದ ನೆಲ
ಮತ್ತೆ ಮತ್ತೆ ಸುತ್ತಿ ಸುತ್ತಿ ಸಿಡಿಸುತಲಿರುವ ಚಕ್ರ ಫಂಖ
ಸಟ್ಟನೆ ಇಟ್ಟೆ ಡುಣ್ಣನೆಯ ಕೋಲೊಂದ
ಕಳಚಿ ಬಿದ್ದು ನಾ ಚಲಿಸುತಿಹೆ ದೂರ-ದೂರ ಬಲು ದೂರ.
ಒಂದೇ ಒಂದು ಸಾರಿ ನೋಡಲಾರೆಯಾ ಕಣ್ಣರಳಿಸಿ
ಎಲ್ಲ ಭೌತ ನಿಯಮ ಮೀರಿ
ವೃತ್ತಾಂತದಿಂದ ನಡೇದೇನು ಕೇಂದ್ರದತ್ತ
ಮೀರಲುಂಟೆ ಭೂತ ಭಾವಗಳ, ಕಳಚಲುಂಟೆ ಭಾಧ್ಯತೆಗಳ?
ಚೂರು ಚೂರುಗಳ ತೇಪಿಸಿ ವಾಂಛೆ ಆಶೆಗಳ ಲೇಪಿಸಿ
ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು
ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ
ನಡೆದು ಬಂದು ನೀನಿಟ್ಟೆ ಅದರಲಿ ಅವರೇ, ಅವರೆ, ಅ ವರೆ.
1 comment:
ಕವನ ವಿಭಿನ್ನವಾಗಿದೆ. ಉತ್ಕಟ ಭಾವವನ್ನು ಬಿಂಬಿಸುತ್ತದೆ. ಅನಿಲರೆ, ನಿಮಗೆ ಅಭಿನಂದನೆಗಳು.
Post a Comment