Tuesday, May 20, 2014

ಹೆಣ್ಣು

ನೀನೆನಗೆ ನಾನಿನಗೆ ಒಲಿದಾಘಳಿಗೆ
ಕೆಳಬಾಗಿದ ನಿನ್ನ ಕಂಗಳಾಹ್ವಾನ
ನಡುಗುವಾ ಅಧರಗಳೇ ಆದವಾಧಾರ
ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ
ನಿನ್ನ ಒದ್ದೆ ತುಟಿಗಳ ನಾ ಕದ್ದೆ
ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ
‘ಇದು ಸ್ವರ್ಗ ನೀ ಸರಸಿ
ಅರಸಿ ಬಂದಿಹ ನಾ ರಸಿಕ’
ಮಾತು ನನ್ನದು -ಜಾಣೆ ನೀ ಮೌನಿ
ಧ್ಯಾನದ ಧನ್ಯತೆ ನಿನ್ನದು
ಅಬ್ಬರದ ಮಂತ್ರದಾರ್ಭಟ ನನ್ನದು.

 

ಹಚ್ಚ ಹಸಿರಿನ ಪಚ್ಚ ಪೈರಿನ ಬಳುಕು
ತುಳುಕಿಸಲು ನಾನೋಡಿದ ಪರಿಗೆ
ನಿನ್ನುತ್ತರವದೇ ಮಂದಹಾಸ
ಪಡೆಯುವದಕ್ಕಿಂತ ಕೊಡುವದರ ಮಹತ್ತು
ಹತ್ತತ್ತು ಸಾರಿ ನೀ ತೋರಿದೆ ಮತ್ತೆ ಮತ್ತೆ
ಕೊಳ್ಳುವದರಲ್ಲೇ ನಾ ಕಾಲ ಕಳೆದೆ
ಕೊಡುತ ಬಾಳುವದ ಕಲಿಬೇಕು ನೋಡಿನ್ನು
ಮನೆ,ಮಹಲು ಬೇಡೆಂದೆ ನೆಮ್ಮದಿ ಮನ ಬೇಕೆಂದೆ
ಮಗುವಾಗಿಸಿ ಮಡಿಲಲ್ಲಿ ತಟ್ಟಿ ಮಲಗಿಸಿದೆ
ಬಿದ್ದಾಗ ತಬ್ಬಿ ಎತ್ತಿ ಎಚ್ಚರಿಸಿದೆ
ಕವಿಯ ಕವಿತೆ ನೀನು ದೀಪದ ಹಣತೆ.

ಅರಿವಾಗದ್ದೆ ಹೆಣ್ಣೆನೋ, ಮಣ್ಣಿನ ಕಣ್ಣೆನೋ
ನೆಲ,ನದಿಯ ಸಂತಾನ ನೀನು
ನಿರಂತರ ನೀಡುವ ನಿಲುವಿನವಳು
ಛಲವ ಚೆಲುವಾಗಿಸಿ ಒರಟನಲ್ಲಿ ಒಲವಿಳಿಸಿ
ನನ್ನ ಬರಡು ಕೊರಳ ಕೊಳಲಾಗಿಸಿದವಳು
ನೋವನುಂಗಿ ಹೊತ್ತು ಹೆತ್ತು
ಭೂಮಿ ಬಗಿದು ಹೊಸತ ಚಿಗಿಸಿ
ಬಾಳನಿತ್ತು ಅನಿತು ಸುಖವ ಬಡಿಸಿದವಳು
ನಿನ್ನ ನೆನೆವವರ ಮನೆಯ ಬಿಟ್ಟು
ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು
ಬಿಟ್ಟ ಮನೆಗೆ ಅಟ್ಟ ಕಟ್ಟಿ ಬದುಕು ಉಟ್ಟವಳು.


ಬನ್ನಣೆಗೆ ಸಿಗದ ಹೊಗಳಿಕೆಗೆ ಹಿಗ್ಗದ
ಮಲ್ಲಿಗೆಯ ಮೊಗ್ಗಿನ ಸುಗಂಧ
ಮೊಗೆದಷ್ಟೂ ಸಿಗುವ ಅಗಿದಷ್ಟೂ ಅಳಿಯದ
ರಾತ್ರಿಯ ನೀರವತೆಯಲ್ಲಿ ಬೆಳಗಿನ ನಿರೀಕ್ಷೆ
ಕತ್ತಲೆಯ ಕದದೂಡಿ ಕಾಂತಿಯಂತೆ ನಿಂತಿ
ಜ್ಞಾನದ ಕೂರ್ಜಾಣ್ಮೆ ನಿರ್ಮಲಾಂತರಂಗ
ಶ್ರೇಷ್ಠತೆಯ ವ್ಯಸನವಿಲ್ಲದ ಒಳತಿನ ಮಿತಿ
ನಗುವರಳಿಸಿ ನಕ್ಕರೆ ನಭಕೆ ಚೆಲ್ಲಿದ ಸಕ್ಕರೆ
ಹೆಣ್ಣಿಲ್ಲದ ಜಗ ಭಣ ಭಣ ಮರವಿಲ್ಲದರಣ್ಯ
ಕಣ ಕಣದಲಿ ತುಂಬಿದ ಅಂತಃಕರಣ
ನೀ ಬಳಲಿದಂದೇ ಮನುಜರ ಮರಣ.

ಹೆಣ್ಣು 

ದೇವನೊಲಿದ

ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.

-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God'  ಪದ್ಯದ ಭಾವಾನುವಾದ)


ದೇವನೊಲಿದ